ರಾಜಕೀಯ ಅಖಾಡಕ್ಕೆ ದಿಂಗಾಲೇಶ್ವರ ಸ್ವಾಮೀಜಿ

ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಹಾಲಿ ಸಂಸದ ಪ್ರಲ್ಹಾದ ಜೋಶಿ ವಿರುದ್ಧ ತೊಡೆ ತಟ್ಟಿರುವ ಶಿರಹಟ್ಟಿ ಭಾವೈಕ್ಯ ಪೀಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.

ಬಿಜೆಪಿಯ ಪ್ರಲ್ಹಾದ ಜೋಶಿ ಹಾಗೂ ಕಾಂಗ್ರೆಸ್‌ನ ವಿನೋದ ಅಸೂಟಿ ನಡುವಿನ ಸ್ಪರ್ಧೆ ಈಗ ಸ್ವಾಮೀಜಿ ಅವರ ಪ್ರವೇಶದಿಂದ ತ್ರಿಕೋನ ಸ್ಪರ್ಧೆಯಾಗಿ ಮಾರ್ಪಟ್ಟಿದೆ. ಸ್ವಾಮೀಜಿ ಅವರ ಸ್ಪರ್ಧೆ ಕುತೂಹಲ ಕೆರಳಿಸಿದೆ.
ರಾಷ್ಟ್ರೀಯ ಪಕ್ಷಗಳ ನಾಯಕರು ಅಲ್ಲದೇ ಭಕ್ತರು ಧಾರವಾಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಒತ್ತಡ ಹೇರುತ್ತಿದ್ದಾರೆ’ ಎಂದು ಸ್ವಾಮೀಜಿ ಎರಡು ವಾರದ ಹಿಂದೆಯೇ ಗದಗದಲ್ಲಿ ಹೇಳಿದ್ದರು. ನಂತರ ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ವಿರುದ್ಧ ನಿರಂತರ ಹರಿಹಾಯ್ದರು. ಜೋಶಿ ಬದಲು ಲಿಂಗಾಯತ ನಾಯಕರಿಗೆ ಟಿಕೆಟ್ ನೀಡುವಂತೆ ಮಾರ್ಚ್ 31ರವರೆಗೆ ಗಡುವು ಕೊಟ್ಟರು. ಆದರೆ, ಬಿಜೆಪಿ ಹೈಕಮಾಂಡ್ ಸ್ಪಂದಿಸಲಿಲ್ಲ.
ಪ್ರಲ್ಹಾದ ಜೋಶಿ ಅವರ ಸೇಡಿನ ರಾಜಕಾರಣದಿಂದ ವೀರಶೈವ ಲಿಂಗಾಯತ. ಕುರುಬ, ಪರಿಶಿಷ್ಟ ಸಮುದಾಯದ ನಾಯಕರು ಮಾನಸಿಕ, ಆರ್ಥಿಕ ಮತ್ತು ರಾಜಕೀಯವಾಗಿ ಕುಸಿದಿದ್ದಾರೆ. ಮಹಿಳಾ ಜನಪ್ರತಿನಿಧಿಗಳಿಗೆ ಅವಮಾನವಾಗಿದೆ. ಜಗದೀಶ ಶೆಟ್ಟರ್‌ನಂತಹ ನಾಯಕರ ಟಿಕೆಟ್ ತಪ್ಪಿಸುವಲ್ಲಿ ಜೋಶಿ ಕೈವಾಡವಿದೆ’ ಎಂದು ಸ್ವಾಮೀಜಿ ಆರೋಪಿಸಿದ್ದರು.
ಸಂಸದರು ಒಂದು ಜಾತಿಗೆ ಸೀಮಿತರಾದವರಲ್ಲ. ಎಲ್ಲ ಜಾತಿ, ಸಮುದಾಯದವರು ಮತ ಹಾಕಿರುತ್ತಾರೆ. ಎಲ್ಲರ ಅಹವಾಲು ಆಲಿಸಬೇಕು. ಎಲ್ಲರ ಅಭಿವೃದ್ಧಿಗಾಗಿ ದುಡಿಯಬೇಕು. ಹೀಗೆ ಮಾಡದ ಅವರನ್ನು ಚುನಾವಣಾ ಕಣದಿಂದ ಬದಲಿಸಿ, ಬೇರೊಬ್ಬ ಅಭ್ಯರ್ಥಿಗೆ ಟಿಕೆಟ್‌ ನೀಡಬೇಕು ಎಂದು ಸ್ವಾಮೀಜಿ ಅವರು ಪಕ್ಷದ ವರಿಷ್ಠ ಬಿ.ಎಸ್‌. ಯಡಿಯೂರಪ್ಪ ಅವರ ಮೇಲೆ ಒತ್ತಡ ಹೇರಿದ್ದರು. ಆದರೆ, ಇದಕ್ಕೆ ಯಡಿಯೂರಪ್ಪ ಒಪ್ಪಲಿಲ್ಲ. ಹೀಗಾಗಿ ಸ್ವಾಮೀಜಿ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲು ಪಣತೊಟ್ಟಿದ್ದಾರೆ’ ಎಂದು ಮೂಲಗಳು ಹೇಳಿವೆ.

Leave a Reply

Your email address will not be published. Required fields are marked *

error: Content is protected !!
× How can I help you?