ಮೂರನೇ ಬಾರಿ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಪದಗ್ರಹಣಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಇದರ ಬೆನ್ನಲ್ಲಿಯೇ ಮೋದಿ ಅವರ ಕ್ಯಾಬಿನೆಟ್ ಸೇರಲು ದೊಡ್ಡ ನೂಕು ನುಗ್ಗಲು ಸೃಷ್ಟಿಯಾಗಿದೆ. ಅದರಲ್ಲೂ ಕರ್ನಾಟಕದಿಂದ ಯಾರಿಗೆ ಕ್ಯಾಬಿನೆಟ್ ಸಚಿವ ಸ್ಥಾನ ಸಿಗಲಿದೆ ಎಂಬ ಚರ್ಚೆಗಳು ಕೂಡ ಶುರುವಾಗಿವೆ. 2014 ಮತ್ತು 2019ರ ಸೂತ್ರವನ್ನು ಪಾಲಿಸಿದರೆ ಕರ್ನಾಟಕಕ್ಕೆ ಎರಡು ಕ್ಯಾಬಿನೆಟ್ ದರ್ಜೆಯ ಸ್ಥಾನಮಾನಗಳು ಮಾತ್ರ ಸಿಗಲಿದೆ.
ಹೊಸದಿಲ್ಲಿ : ಲೋಕಸಭಾ ಚುನಾವಣೆ ಫಲಿತಾಂಶ ಬಂದಿದ್ದು, ಮೂರನೇ ಬಾರಿಗೆ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಗದ್ದುಗೆ ಹಿಡಿಯುವುದು ಫಿಕ್ಸ್ ಆಗಿದೆ. ಇದರ ಬೆನ್ನಲ್ಲೇ ಕ್ಯಾಬಿನೆಟ್ ರಚನೆಯ ಸರ್ಕಸ್ ಶುರುವಾಗಿದೆ. ಕಳೆದ ಎರಡು ಬಾರಿಗಿಂತ ಈ ಬಾರಿ ಸ್ವಲ್ಪ ಜಾಸ್ತಿ ಸವಾಲುಗಳು ಮೋದಿಗೆ ಎದುರಾಗಿವೆ. ಇದರ ನಡುವೆ ಈ ಬಾರಿ ಕರ್ನಾಟಕಕ್ಕೆ ಎಷ್ಟು ಸಚಿವ ಸ್ಥಾನ ಸಿಗಬಹುದು? ಯಾರಿಗೆ ಮಂತ್ರಿಗಿರಿ ಸಿಗುತ್ತದೆ ಎಂಬ ಪ್ರಶ್ನೆಗಳು ಹರಿದಾಡುತ್ತಿವೆ. ಅವರಿಗೆ, ಇವರಿಗೆ ಸಚಿವ ಸ್ಥಾನ ಫಿಕ್ಸ್ ಎಂಬಂತೆ ಸುದ್ದಿಗಳು ಓಡಾಡುತ್ತಿವೆ.. ಆದರೆ, ಇರೋ ವಿಷಯವೇ ಬೇರೆ.. ಇನ್ಸೈಡ್ ಮಾಹಿತಿಯೇ ಬೇರೆ.. ಅದೆಲ್ಲಾ ವಿವರಗಳನ್ನು ಇಲ್ಲಿ ನೋಡೋಣ ಬನ್ನಿ.
ಹೌದು, ಈ ಬಾರಿ ಏಕಾಂಗಿಯಾಗಿ ಬಿಜೆಪಿ ಮ್ಯಾಜಿಕ್ ನಂಬರ್ ಅನ್ನು ಕ್ರಾಸ್ ಮಾಡಿಲ್ಲ. ಆದ್ದರಿಂದ ಮಿತ್ರ ಪಕ್ಷಗಳ ಮರ್ಜಿಗೆ ಮೋದಿ ಅವರು ಬಿದ್ದಿದ್ದಾರೆ. ಸರ್ಕಾರ ಸುಭದ್ರವಾಗಿರಬೇಕೆಂದರೆ ಮಿತ್ರಪಕ್ಷಗಳ ಬೇಡಿಕೆಗೆ ಒಪ್ಪಿ, ಅವರನ್ನು ಜೊತೆಗೆ ಕರೆದುಕೊಂಡು ಹೋಗುವ ಅನಿವಾರ್ಯತೆ ಇದೆ. ಆದ್ದರಿಂದ ಈ ಬಾರಿ ಕರ್ನಾಟಕಕ್ಕೆ ಅಂದುಕೊಂಡದ್ದಕ್ಕಿಂತ ಕಡಿಮೆ ಸಚಿವ ಸ್ಥಾನಗಳು ಸಿಗಲಿವೆ. ಹೆಚ್ಚೆಂದರೆ ಎರಡು ಕ್ಯಾಬಿನೆಟ್ ಸಚಿವ ಸ್ಥಾನ, ಒಂದೆರಡು ರಾಜ್ಯ ಸಚಿವ ಸ್ಥಾನಮಾನಗಳು ರಾಜ್ಯಕ್ಕೆ ಸಿಗಬಹುದು.. ಅದು ಬಿಟ್ಟರೇ ಈ ಬಾರಿ ಎನ್ಡಿಎ ಸರ್ಕಾರದಲ್ಲಿ ಹೆಚ್ಚಿನದನ್ನು ನಿರೀಕ್ಷಿಸುವ ಪೂರಕ ಸನ್ನಿವೇಶಗಳಂತೂ ಕಾಣ್ತಿಲ್ಲ.
ಯಾರಿಗೆ ಸಚಿವ ಸ್ಥಾನದ ಭಾಗ್ಯ?
ಈ ಬಾರಿ ಕರ್ನಾಟಕದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡು 17 + 2 ಒಟ್ಟು 19 ಸ್ಥಾನಗಳನ್ನು ಗೆದ್ದುಕೊಂಡಿವೆ. ಅದರಲ್ಲೂ ಜೆಡಿಎಸ್ನಿಂದ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಅವರು ಗೆದ್ದಿದ್ದು, ಅವರಿಗೆ ಸಚಿವ ಸ್ಥಾನ ಬಹುತೇಕ ಫಿಕ್ಸ್ ಆಗಿದ್ದು, ಅವರು ಅಂದುಕೊಂಡ ಖಾತೆ ಸಿಗಬೇಕಷ್ಟೇ. ಅದಾದ ಬಳಿಕ ಮತ್ತೊಂದು ಸ್ಥಾನ ಬಿಜೆಪಿ ಸಂಸದರಿಗೆ ಸಿಗಬಹುದು. ಸಂಸದೀಯ ಸಚಿವರಾಗಿರುವ ಕಾರಣ ಹಾಲಿ ಸಚಿವ ಪ್ರಹ್ಲಾದ್ ಜೋಶಿಯೇ ಕ್ಯಾಬಿನೆಟ್ನಲ್ಲಿ ಮುಂದುವರಿಯುವ ಸಾಧ್ಯತೆ ದಟ್ಟವಾಗಿದೆ
ಇದಾದ ಬಳಿಕ ಲಿಂಗಾಯತರಿಗೊಂದು, ಹಿಂದುಳಿದ ವರ್ಗಗಳಿಗೊಂದು ರಾಜ್ಯ ಸಚಿವ ಸ್ಥಾನವನ್ನು ನೀಡಬಹುದು ಎನ್ನಲಾಗಿದೆ. ಬಾಗಲಕೋಟೆ ಸಂಸದ ಪಿಸಿ ಗದ್ದಿಗೌಡರ್ ಐದನೇ ಬಾರಿ ಸಂಸದರಾಗಿ ಆಯ್ಕೆ ಆಗಿರುವುದರಿಂದ ಲಿಂಗಾಯತ ಕೋಟಾದಲ್ಲಿ ಅವರಿಗೆ ಸಚಿವ ಸ್ಥಾನ ಸಿಗಬಹುದು. ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ ಕೂಡ ಸಚಿವ ಸ್ಥಾನದ ರೇಸ್ನಲ್ಲಿದ್ದಾರೆ. ಆದರೆ, ಅವರ ಸಹೋದರ ಬಿವೈ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ, ಅವರ ತಂದೆ ಬಿಎಸ್ ಯಡಿಯೂರಪ್ಪ ಬಿಜೆಪಿ ಸಂಸದೀಯ ಮಂಡಳಿ ಸದಸ್ಯರಾಗಿರುವುದರಿಂದ ರಾಘವೇಂದ್ರಗೆ ಸಚಿವ ಸ್ಥಾನ ತಪ್ಪುವ ಸಾಧ್ಯತೆ ಇದೆ.
ಅಚ್ಚರಿ ಕೊಡ್ತಾರಾ ನರೇಂದ್ರ ಮೋದಿ?
ಕೋಟ ಶ್ರೀನಿವಾಸ್ ಪೂಜಾರಿ ಹಾಗೂ ಗೋವಿಂದ ಕಾರಜೋಳ ಅವರು ಮೊದಲ ಬಾರಿ ಸಂಸದರಾಗಿದ್ದರೂ ಕೂಡ ಅವರಿಗೆ ರಾಜ್ಯ ರಾಜಕೀಯದಲ್ಲಿ ಅಪಾರ ಅನುಭವ ಇರುವುದರಿಂದ ಇಬ್ಬರಲ್ಲಿ ಒಬ್ಬರಿಗೆ ಸಚಿವ ಸ್ಥಾನ ಸಿಗಬಹುದು ಎನ್ನಲಾಗಿದೆ. ಇದರ ಜೊತೆ ನಾಲ್ಕು ಬಾರಿಯ ಸಂಸದ ಪಿಸಿ ಮೋಹನ್ ಹೆಸರು ಕೂಡ ಕೇಳಿಬರ್ತಿದೆ. ಮಹಿಳಾ ಕೋಟಾದಲ್ಲಿ ಶೋಭಾ ಕರಂದ್ಲಾಜೆ ಅವರಿಗೆ ಸಚಿವ ಸ್ಥಾನವನ್ನು ಮುಂದುವರಿಸಬಹುದು. ಇದರಲ್ಲಿಯೇ ಬೆಂಗಳೂರು ಕೋಟಾವನ್ನು ಕೂಡ ಮುಗಿಸಬಹುದು ಎನ್ನಲಾಗಿದೆ.
ಪ್ರಮುಖವಾಗಿ ಡಾ ಸಿಎನ್ ಮಂಜುನಾಥ್ ಅವರ ಹೆಸರು ಭಾರೀ ಕೇಳಿಬರುತ್ತಿದೆ. ಆದರೆ, ಎಚ್ಡಿ ಕುಮಾರಸ್ವಾಮಿ ಒಕ್ಕಲಿಗರಾಗಿರುವುದರಿಂದ ಮತ್ತೊಂದು ಸಚಿವ ಸ್ಥಾನವನ್ನು ಒಕ್ಕಲಿಗ ಸಮುದಾಯಕ್ಕೆ ನೀಡುವುದು ಡೌಟ್. ಅದರ ಜೊತೆ ಮಂಡ್ಯ ಹಾಗೂ ಬೆಂಗಳೂರು ಗ್ರಾಮಾಂತರ ಅಕ್ಕಪಕ್ಕದ ಕ್ಷೇತ್ರಗಳು ಆಗಿರೋದ್ರಿಂದ ಡಾ ಸಿಎನ್ ಮಂಜುನಾಥ್ ಮತ್ತೊಂದಿಷ್ಟು ದಿನ ಸಚಿವರಾಗಲು ಕಾಯಬೇಕಿದೆ ಎನ್ನಲಾಗಿದೆ.
ಕಳೆದ ಎರಡು ಸರ್ಕಾರಗಳಲ್ಲಿ ಅನುಸರಿಸಿದ್ದ ಸೂತ್ರ ಪಾಲನೆ?
2014 ಮತ್ತು 2019ರಲ್ಲಿ ತಲಾ ಎರಡೆರಡು ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನವನ್ನು ಕರ್ನಾಟಕಕ್ಕೆ ನೀಡಲಾಗಿತ್ತು. 2014ರಲ್ಲಿ ಅನಂತ ಕುಮಾರ್ ಹಾಗೂ ಡಿವಿ ಸದಾನಂದಗೌಡಗೆ ಕ್ಯಾಬಿನೆಟ್ ಸಚಿವ ಸ್ಥಾನ ನೀಡಿದ್ದರೆ, 2019ರಲ್ಲಿ ಡಿವಿ ಸದಾನಂದಗೌಡ ಹಾಗೂ ಪ್ರಹ್ಲಾದ್ ಜೋಶಿಗೆ ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನ ನೀಡಲಾಗಿತ್ತು. ಅದೇ ಫಾರ್ಮುಲಾವನ್ನು ಈ ಬಾರಿಯೂ ಮುಂದುವರಿಸುವ ಸಾಧ್ಯತೆ ಇದೆ. ಜೊತೆಗೆ ಒಂದು ಅಥವಾ ಎರಡು ರಾಜ್ಯ ಸಚಿವ ಸ್ಥಾನ ನೀಡಬಹುದು, ನೀಡದೇ ಇರಬಹುದು. ಮುಂದೆ ಮಹಾರಾಷ್ಟ್ರ ಹಾಗೂ ದಿಲ್ಲಿ ವಿಧಾನಸಭಾ ಚುನಾವಣೆ ಇರುವುದರಿಂದ ಅಲ್ಲಿಗೆ ಹೆಚ್ಚಿನ ಸಚಿವ ಸ್ಥಾನಗಳನ್ನು ನೀಡುವ ನಿರೀಕ್ಷೆ ಇದೆ ಅದಾದ ಬಳಿಕ ಸಂಪುಟ ಪುನಾರಚನೆ ವೇಳೆ ಮತ್ತೊಂದಿಷ್ಟು ಜನಕ್ಕೆ ಅವಕಾಶ ಸಿಗಬಹುದು.